ಗಾಂಧಿ ಜಯಂತಿಯ ಪ್ರಯುಕ್ತ ರಾಯಚೂರಿನ ಎ.ಪಿ.ಎಂ.ಸಿ.ಅಡಿಟೋರಿಯಂ ಗಂಜ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಸಹಯೋಗದಲ್ಲಿ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶ್ರೀ ರವಿ ಬೋಸರಾಜು ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಗಾಂಧಿಜೀ ಯವರ ತತ್ವಗಳನ್ನು ಅಳವಡಿಸಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ವ್ಯಸನ ಮುಕ್ತ ಕಾರ್ಯಕ್ರಮದೊಂದಿಗೆ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪಣತೊಡುವ ಮೂಲಕ ಸರ್ಕಾರವನ್ನು ಕಣ್ತೇರೆಸುವ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ. ಗಾಂಧೀಜಿ ಕಂಡ ಕನಸು ನನಸಾಗಿಸುವ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆ, ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಮತ್ತು ಗ್ರಾಮಗಳ ಸ್ವಚ್ಛತೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಮಹತ್ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿದ್ದಾರೆ ಇದು ಬಹಳ ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಯಚೂರು ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯ್ಕ್ ರವರು ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯೇ ಗ್ರಾಮಾಭಿವೃದ್ಧಿ ಯೋಜನೆ ಇದಕ್ಕೆ ಪೂರಕವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ 42 ವರ್ಷಗಳಿಂದ ಲೋಕ ಕಲ್ಯಾಣಕ್ಕಾಗಿ ಸೇವಾ ಚಟುವಟಿಕೆಯೊಂದಿಗೆ ಕೃಷಿ ಪೂರಕ ಹಾಗೂ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ 1982 ರಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಪರಿಕಲ್ಪನೆಯೊಂದಿಗೆ ಹುಟ್ಟು ಹಾಕಿ ಇಂದು ರಾಜ್ಯದಲ್ಲಿ ಸುಮಾರು 6,52,698 ಸಂಘಗಳು ರಚನೆಯಾಗಿದ್ದು, 54,61,081 ಫಲಾನುಭವಿಗಳನ್ನು ಹೊಂದಿದೆ. ರಾಯಚೂರು ಜಿಲ್ಲೆಯಲ್ಲಿ 2013 ರಿಂದ ಕಾರ್ಯಚಟುವಟಿಕೆ ಮಾಡುತ್ತಿದ್ದು, 16,550 ಸ್ವಸಹಾಯ ಸಂಘಗಳಿದ್ದು, 1,72,000 ಸದಸ್ಯರು ಸಂಸ್ಥೆಯ ಫಲಾನುಭವಿಗಳಾಗಿ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಸಂಸ್ಥೆಯನ್ನು ವೀರೇಂದ್ರ ಹೆಗಡೆಯವರು ನೊಂದವರ ಕಣ್ಣಿರು ಒರೆಸುವದಕ್ಕಾಗಿ, ನಿರ್ಗತಿಕರಿಗೆ ನೆಲೆ ಕಲ್ಪಿಸುವುದಕ್ಕೆ, ರೈತರ ಪ್ರಗತಿಗೆ, ಜನರ ಆರೋಗ್ಯಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ, ಕೆರೆಗಳ ಜೀರ್ಣೋದ್ದಾರದಂತಹ ಅನೇಕ ಯೋಜನೆಗಳನ್ನು ರೂಪಿಸಿ ಸಮಾಜಮುಖಿ ಕೆಲಸ ಮಾಡುತ್ತಿದ್ದು ಹೆಗ್ಗಡೆಯವರ ಸೇವೆ ಅವಿಸ್ಮರಣೀಯವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ರಾಯಚೂರು ಜಿಲ್ಲೆಯಲ್ಲಿ ಐಡಿಬಿಐ ಬ್ಯಾಂಕ್ ನ ವ್ಯವಹಾರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರಿಗೆ ಅತೀ ಕಡಿಮೆ 58 ಪೈಸೆ ಬಡ್ಡಿ ದರದಲ್ಲಿ ಪ್ರಗತಿನಿಧಿ ಸೌಲಭ್ಯವನ್ನು ನೀಡುವುದರ ಜೊತೆಗೆ ಉಳಿತಾಯ ಮಾಡುವ ಮನೋಭಾವನೆಯನ್ನು ಸ್ವಸಹಾಯ ಸಂಘಗಳ ಸದಸ್ಯರಿಗೆ ಅರಿವು ಮೂಡಿಸಿದೆ. ರಾಜ್ಯಾದ್ಯಂತ 1856 ಮದ್ಯವರ್ಜನ ಶಿಬಿರಗಳನ್ನು ಮಾಡಿ 1,36,000 ಸದಸ್ಯರು ಪಾನಮುಕ್ತರಾಗಿ ನವಜೀವನದೊಂದಿಗೆ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಗಾಂಧೀಜಿ ಕಂಡ ಕನಸು ನನಸು ಮಾಡುವ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡಲಾಗುತ್ತಿದೆ ವ್ಯಸನ ಮುಕ್ತ ಜೀವನ ನಡೆಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಾಗೂ ಆಪತ್ತಿನ ಕಾಲದಲ್ಲಿ ನೆರವಾಗುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಘಟಕವನ್ನು ಜನಜಾಗೃತಿ ವೇದಿಕೆ ಮೂಲಕ ಮಾಡಲಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಬೆಂಚು ಡೆಸ್ಕ್ ಒದಗಣೆ, ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನ ದೀಪ ಶಿಕ್ಷಕರ ಒದಗಣೆ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಎಸ್. ಜನಾರ್ದನ ರೆಡ್ಡಿ, ಶ್ರೀ ವೇಂಕಟೇಶ್ ಕಾಸರವಳ್ಳಿ, ಶ್ರೀ ಜಿ. ವಿಜಯರಾಜ ರೆಡ್ಡಿ , ಶ್ರೀ ಬ್ರಹ್ಮಾನಂದ ರೆಡ್ಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಶ್ರೀ ಪ್ರಕಾಶ್ ನಂದಿ, ಶ್ರೀ ಸತೀಶ್ ಬಳೆ ದೇವದುರ್ಗ, ಶ್ರೀ ತಿಮ್ಮಾರೆಡ್ಡಿ, ಶ್ರೀ ಈರಣ್ಣ ಬಾಯಿದ್ದೊಡ್ಡಿ ಯೋಜನಾಧಿಕಾರಿಗಳಾದ ಶ್ರೀ ಶಿವಾಜಿ ಜಿ., ಶ್ರೀ ರಾಜೇಶ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
